Tuesday, August 1, 2017

ಗೊಂಚಲು - ಎರಡ್ನೂರಾ ಇಪ್ಪತ್ತೇಳು.....

ಅಂದಾದುಂದಿ ಕಳೆದೋದ ಅಷ್ಟೊಂದು ವರುಷಗಳು..... 

ಕಪ್ಪಾದರೂ ಇರುಳು; ಕಪ್ಪಲ್ಲ ಕಣ್ಣ ಬೆಳಕು -
ಬೆಳ್ಳಗಿದ್ದರೂ ಹಗಲು ಹಾಲಲ್ಲ; ತೋರುವಲ್ಲಿ ಎದೆಯ ಒಡಕು...

ನಂಗೆ ಪ್ರೀತಿಯ ಉತ್ತಿ ಬಿತ್ತಿ ಗೊತ್ತಿಲ್ಲ...
ಪ್ರೀತಿಯ ಮಟ್ಟು ಪೆಟ್ಟುಗಳ ಅರಿವಿಲ್ಲ...
ನನ್ನದೇನಿದ್ದರೂ ಆ ಆ ಕ್ಷಣಗಳಿಗಿಷ್ಟಿಷ್ಟು ತೋಚಿದಷ್ಟು ತೋಚಿದಂತೆ ಸ್ಪಂಧಿಸುವುದು, ಕ್ರಿಯೆಗಳಿಗೆ ಅಗತ್ಯ ಪ್ರತಿಕ್ರಿಯೆ ನೀಡುತ್ತಾ ಸಾಗುವುದು...

ಪ್ರೀತಿ ಮೌನದ ಕಡಲು ಅಂದವರ ನಡುವೆ ನಾನು ಅಲೆಗಳಿಗೆ ಕಿವಿಯೊಡ್ಡುತ್ತೇನೆ...
ನಿಜದಲ್ಲಿ ಪ್ರೀತಿ ಮಾತೂ ಅಲ್ಲ, ಮೌನವೂ ಅಲ್ಲ - ಅದು ಹಸಿದೆದೆಯ ಜೊತೆ ಕೂತು ಘನತೆ ತುಂಬಿ ಕೊಡುವ ಮಾತು ಮೌನದ ಹದ ಬೆರೆತ ಭರವಸೆಯ ತುತ್ತಿನ ಸ್ಪರ್ಶ...

ನಂದೇನಿಲ್ಲ ಬಿದ್ದ ಬೀಜದ ಆಯ್ಕೆಯದು ಮೊಳೆಯುವುದಾ ಇಲ್ಲಾ ಕೊಳೆಯುವುದಾ ಎಂಬುದು - ಎನ್ನೆದೆಯ ಬಿಸಿ ಬರೀ ಪೋಷಕ ಪುರವಣಿ ಅಷ್ಟೇ...

ನಿಜ ಗೊತ್ತಾ,
ನಂಗೆ ಅನ್ನ ಹೆಚ್ಚಾದರೆ ಮರುದಿನ ಆ ನಾಯಿಗೆ ಅಜೀರ್ಣ - ಜಗದ ಕಣ್ಣಲ್ಲಿ ನಂಗೆ ನಾಯಿ ಅಂದ್ರೆ ತುಂಬಾ ಪ್ರೀತಿ...
#ಯಾರದು_ಜಾಲಿಯ_ಮರದಡಿ_ನೆರಳ_ಹುಡುಕುವವರು...

ಮರಳಿ ಬಾರದ ಮನ್ವಂತರಕೆ ಮರಮರಳಿ ಹೊರಳ್ಹೊರಳಿ ಕನವರಿಸುವ ಕರು ಮನಸು...
ನಗೆಯ ನಿನ್ನೆಯ ಹೊಗೆಯೂ ಇಲ್ಲ ಇಂದಿನಲಿ - ಹಾಗಿದ್ದೂ ನಾಳೆಯ ಕನಸುವುದು ನಿಲ್ಲದು; ನೆರಳಿಲ್ಲದಿದ್ದರೇನಂತೆ ಬೇರಿಹುದಲ್ಲ ಜಾಲಿ ಮರಕೆ...
ಸಂತೆಯೊಳಗಣ ನಗುವಿಗೆ ಏಕಾಂತದಿ ಸುರಿದೋದ ಎದೆಹನಿಯೇ ಪ್ರಧಾನ ಅರ್ಘ್ಯ ಅಂತಂದರೆ ಸಾಕ್ಷಿ ಕೇಳಬೇಡಿ...

ಪಕ್ಕನೆ ಅತ್ತುಬಿಡೋ ಸ್ವಾತಂತ್ರ್ಯ ಕಿತ್ತುಕೊಂಡು, ರಟ್ಟೆಗೆ ಬಲ ತುಂಬದೇ ಹುಚ್ಚು ಇಚ್ಛೆಗಳ ಕಿಚ್ಚನು ಮೈಮನದೆ ತುಂಬಿ, ಬಿಕ್ಕಿ ನಗಬೇಕಾದ ಹರೆಯವ ಕೈಗಿತ್ತು ಮಜ ನೋಡುವ ಬದುಕಿನ ತಣ್ಣನೆಯ ಕ್ರೌರ್ಯವ ಏನೆಂತು ಬಣ್ಣಿಸಲಿ...
ಆದರೂ, ಎಂಥದ್ದೇ ಆದರೂ ನಗುತಿರುವಂತೆಯೇ ಪಾತ್ರ - ಆಗಬಾರದೆ ಗೋಡೆಯ ಚಿತ್ರ...
ಯಾವುದೂ ಅನಗತ್ಯವಾಗಿ ಉದ್ದುದ್ದ ಬೆಳೆಯಬಾರದಲ್ಲವಾ...

"ಹುಟ್ಟು ಹಬ್ಬವಾಗುವುದು ಅಮ್ಮನ ಕರುಳ ಬಲದಿಂದ...
ಬದುಕು ಹಬ್ಬವಾಗುವುದು ಅವರವರ ಆತ್ಮ ಬಲದಿಂದ..." ಹೀಗಂತ ನಾನೇ ಹೇಳಿದೆ...
ಆದರೆ ಮೂವತ್ತು ಮತ್ತೈದು ವರ್ಷಗಳ ಕಳೆದು ಮತ್ತೊಂದು ಹೊಸ ವರ್ಷದ ಬಾಗಿಲಲಿ ನಿಂತು ಹಿಂತಿರುಗಿ ನೋಡಿದರೆ  ಆ ಆತ್ಮಬಲ ನನ್ನಲಿದೆಯಾ ಎಂಬ ಪ್ರಶ್ನೆಗೆ ಉತ್ತರ ಇಲ್ಲ ಎಂಬುದೇ ಆಗಿರುತ್ತೆ...

ಅದೇ ಹೆಸರು, ಏರಿಳಿವ ಉಸಿರು, ಅದೇ ನಾಡಿ ಮಿಡಿತ, ನಿಲ್ಲದ ಹೃದಯದ ಲಬ್ ಡಬ್ ಬಡಿತ ಮತ್ತು ಗೋನಾಳಿ ಒಡೆವಂತ ಅಟ್ಟಹಾಸ...
ಜಗದ ಹಾದಿಯಲ್ಲಿ ನಾನಿನ್ನೂ ಬದುಕಿಯೇ ಇದ್ದೇನೆ...

ಆದ್ರೆ ಏನ್ಗೊತ್ತಾ -
ತಳ ಒಡೆದ ಮಡಕೆಯಂತ ನನ್ನೊಳಗೆ ನಾ ಸತ್ತು ದಿನವೆಷ್ಟಾಯಿತೋ...
ಹೆಣವೊಂದು ಬದುಕಿನೊಂದಿಗೆ ಮಾತಾಡಿದಂತೆ ಈ ಖಾಲಿ ಖಾಲಿ ತುಕಾಲಿ ದಿನಗಳು...

ಅರೆ, ಅಷ್ಟರಲ್ಲಿ ಮಸಣದ ಮುತ್ತುಗದ ಹೂವಿನೊಂದಿಗೆ ದುಂಬಿಯೊಂದು ಸುರತಕ್ಕೆ ಬಿದ್ದುದ ಕಂಡೆ - ಮತ್ತೆ ಎದೆಯ ಗೋನಾಳದ ತಳದಲ್ಲೊಂದು ಭರವಸೆಯ ಬಿಂದು...
ಈ ವರ್ಷ ಮಳೆ ಸಮೃದ್ಧವಿದ್ದೀತು...

ಹುಟ್ಟು ನನ್ನ ಆಯ್ಕೆ ಆಗಿರಲಿಲ್ಲ, ಸಾವು ಯಾರದೇ ಅಂಕೆಯಲಿಲ್ಲ; ಈ ಬದುಕು ಇದು ನನ್ನದು...
ಹೌದು, ಹಾಗಾಗಿ ಅದು ಇದ್ದಂತೆಯೇ ಇರ್ಲಿ ಬಿಡು ಅನ್ನೋದು ಸಿಗದ ಹಣ್ಣು ಹುಳಿ ಹುಳಿ ಎಂಬ ನರಿ ಬುದ್ಧಿಯ ಸ್ವಾರ್ಥ...

ಶುಭಾಶಯಗಳು ಬದುಕೇ - 
ಎಲ್ಲ ತೊರೆದೋದ ಮನೆಯ ಮೂಲೆಯ ಮಾಡುಗುಳಿಯಲ್ಲಿ ಮರೆತು ಉಳಿದೋದ ಅನಾಥ ಎಣ್ಣೆಯ ಗಿಂಡಿಯಂತೆ ಸಾವಿನ ಕಣ್ಣಂಕೆಯಿಂದ ನುಣುಚಿಕೊಂಡು ಇಷ್ಟು ಕಾಲ ಬದುಕಿದ್ದಿದ್ದಕ್ಕೆ - ಎಂದೋ ಅನಾದಿಯಲ್ಲಿ ಇದೇ ತೇದಿಯ ದಿನ ಹುಟ್ಟಿದ್ದೆ ಎಂಬ ನೆಪದಲ್ಲಿ...      

                                        ___ ಶ್ರೀವತ್ಸ ಕಂಚೀಮನೆ 

No comments:

Post a Comment